ಬನವಾಸಿ: ಬಿಜೆಪಿ ಇತಿಹಾಸದ ಬಗ್ಗೆ ಸಂಸದ ಕಾಗೇರಿ ಅವರಿಂದ ನಾನು ಕಲಿತುಕೊಳ್ಳಬೇಕಾದ ಅಗತ್ಯತೆ ಇಲ್ಲ. ಕಾಗೇರಿಯವರು ರಾಜಕೀಯ ಕ್ಷೇತ್ರಕ್ಕೆ ಬರುವ ಪೂರ್ವದಲ್ಲಿಯೇ ನಾನು ಬಿಜೆಪಿಯ ಜಿಲ್ಲಾಧ್ಯಕ್ಷನಾಗಿದ್ದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಕೃಷಿ ಇಲಾಖೆ ನೀಡುವ ಸಹಾಯಧನದ ಟ್ರಾಕ್ಟರ್, ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಿದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಸಂಸದ ಕಾಗೇರಿ, ಶಿವರಾಮ ಹೆಬ್ಬಾರ್ ಅವರಾಗಿಯೇ ರಾಜೀನಾಮೆ ನೀಡಬೇಕಿತ್ತು ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾರ್ ಬಿಜೆಪಿಯಿಂದ ಉಚ್ಛಾಟಿಸಿದ್ದಕ್ಕೆ ಮುಂದೇನು ಎಂಬ ಬಗ್ಗೆ ತುರ್ತಾಗಿ ನಿರ್ಣಯ ಸ್ವೀಕರಿಸಬೇಕಾದ ಅವಶ್ಯಕತೆ ನನಗಿಲ್ಲ. ೨೦೨೮ರವರೆಗೂ ಸಮಯವಿದ್ದು, ಚರ್ಚಿಸಿ, ಚಿಂತಿಸಿದ ಬಳಿಕವೇ ನಿರ್ಧಾರ ಕೈಗೊಳ್ಳುತ್ತೇನೆ. ವಿಶ್ವೇಶ್ವರ ಹೆಗಡೆ ಕಾಗೇರಿಯವರು ದೊಡ್ಡವರು, ಅವರ ಹೇಳಿಕೆಗಳಿಗೆಲ್ಲ ಈಗಲೇ ಪ್ರತಿಕ್ರಿಯಿಸುವುದಿಲ್ಲ. ಬೇರೆ ಯಾರೂ ರಾಜಕೀಯದಲ್ಲಿ ಬೆಳೆಯಬಾರದು ಎಂಬ ಮನೋಸ್ಥಿತಿ ಕಾಗೇರಿಯವರದ್ದಾಗಿದೆ. ಹೀಗಾಗಿ, ತ್ವರಿತವಾಗಿ ನಾನು ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಪ್ರತಿಕ್ರಿಯಿಸದೇ ಬಿಡುವುದಿಲ್ಲ. ಜಿಲ್ಲೆಯಲ್ಲಿ ಇಷ್ಟು ವರ್ಷಗಳ ಕಾಲ ಏನೆಲ್ಲ ರಾಜಕೀಯ ಬೆಳವಣಿಗೆ ನಡೆದಿದೆ, ಯಾರು ಯಾರನ್ನು ಬೆಳೆಸಿದ್ದಾರೆ, ಯಾರು ತಾವೇ ಬೆಳೆದಿದ್ದಾರೆ? ನನಗೆ ಗೊತ್ತಿಲ್ಲದ ಇತಿಹಾಸ ಇಲ್ಲ. ನಾನು ಮಂತ್ರಿಯಾಗಿದ್ದಾಗ ಕಾಗೇರಿಯವರು ಸ್ಪೀಕರ್ ಆಗಿದ್ದರು ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು. ಕಾಂಗ್ರೆಸ್ ಸಂಸದ ಶಶಿ ತರೂರು ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ ? ಕಾಂಗ್ರೆಸ್ ಸಂಸದರಾಗಿ ಬಿಜೆಪಿ ಒಲವು ಹೊಂದಿದ್ದಾರೆ ಈ ಬಗ್ಗೆ ಅವರೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ನಾನು ಬಿಜೆಪಿಗೆ ಬಂದಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಿದ್ದನ್ನು ಮತ್ತೆ ಮತ್ತೆ ಚರ್ಚೆ ಮಾಡಿ ಪ್ರಯೋಜನವಿಲ್ಲ. ಈಗ ಎಲ್ಲವೂ ಮುಗಿದ ಅಧ್ಯಾಯ. ಕೆಡಿಸಿಸಿ ಬ್ಯಾಂಕ್ ಸಹಕಾರಿ ಸುವ್ಯವಸ್ಥೆಯಲ್ಲಿದ್ದು, ಇಲ್ಲಿ ರಾಜಕೀಯ ಬೆರೆಸಲು ನಾನು ಸಿದ್ಧನಿಲ್ಲ. ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುವುದು ಸಾಮಾನ್ಯ. ಈಗ ಅವಧಿ ಮುಕ್ತಾಯವಾಗುತ್ತಿದ್ದು, ನವೆಂಬರ್ ನಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಕೆಡಿಸಿಸಿ ಬ್ಯಾಂಕ್ನಲ್ಲಿ ರಾಜಕೀಯಕ್ಕೆ ಆಸ್ಪದ ನೀಡುವುದಿಲ್ಲ ಎಂದರು.
ಬಳಿಕ ಬನವಾಸಿ ಗ್ರಾಮ ಪಂಚಾಯಿತಿಯ ಕಸ ಸಂಗ್ರಹಣೆಯ ವಾಹನವನ್ನು ಉದ್ಘಾಟಿಸಿ, ಆಶ್ರಯ ಮನೆ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು. ಗ್ರಾ ಪಂ ಅಧ್ಯಕ್ಷೆ ಬಿಬಿ ಆಯಿಷಾ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.